July 26, 2024

Vokkuta News

kannada news portal

ಟೋಲ್ ಮುತ್ತಿಗೆ, ಬಂಧನಕ್ಕೊಳಗಾದ ಪ್ರತಿಭಟನಾಕಾರರು.

ಮಂಗಳೂರು:ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಟೋಲ್ ವಿರೋಧಿ ಹೋರಾಟ ಸಮಿತಿ ಮತ್ತು ಮಂಗಳೂರಿನ ಸಮಾನ ಮನಸ್ಕ ಸಂಘಟನೆಗಳು ಕರೆ ನೀಡಿರುವ ಬೃಹತ್ ಪ್ರತಿಭಟನೆ ವೇಳೆ ಮುತ್ತಿಗೆ ಹಾಕಲು ಯತ್ನಿಸಿದ ಸುಮಾರು ಐನೂರಕ್ಕೊ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.

ಸುರತ್ಕಲ್ ಟೋಲ್ ಹೋರಾಟ ಸಮಿತಿ ಸಂಚಾಲಕ ರಾದ ಮತ್ತು ಹೋರಾಟದ ಪ್ರಮುಖರಾದ ಮುನೀರ್ ಕಾಟಿಪಳ್ಳ, ಪ್ರತಿಭಾ ಕುಳಾಯಿ, ಮಿಥುನ್ ರೈ, ವಿನಯ್ ಕುಮಾರ್ ಸೊರಕೆ, ಮೊಹಿದಿನ್ ಬಾವ ಐವನ್ ಡಿ ಸೋಜಾ ಸೇರಿದಂತೆ ನೂರಾರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸುರತ್ಕಲ್ ಟೋಲ್ ಹೋರಾಟ ಸಮಿತಿಯ ಪ್ರಮುಖರಾದ ಮುನೀರ್ ಕಾಟಿಪಳ್ಳ, ಪ್ರತಿಭಾ ಕುಳಾಯಿ, ಮಾಜಿ ಶಾಸಕರಾದ ಐವನ್ ಡಿಸೋಜ, ಶಕುಂತಳಾ ಶೆಟ್ಟಿ, ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಮಿಥುನ್ ರೈ, ಶಶಿಧರ್ ಹೆಗ್ಡೆ, ಬಿ.ಕೆ.ಇಮ್ತಿಯಾಝ್ ಮೊದಲಾದವರು ಹೋರಾಟಕ್ಕೆ ನೇತೃತ್ವ ನೀಡಿದ್ದರು.

ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಟೋಲ್ ತೆರವು ಸಮಿತಿ ವತಿಯಿಂದ ಪ್ರತಿಭಟನೆ ವೇಳೆ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಟೋಲ್ ಪ್ಲಾಜಾ ಮೇಲೇರಿ ಆಕ್ರೋಶ ವ್ಯಕ್ತಪಡಿಸಿರುವ ಪ್ರಸಂಗ ನಡೆದಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಟೋಲ್ ಗೇಟ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಟೋಲ್ ಗೇಟ್ ಬಳಿ 10 ಕೆಎಸ್ಆರ್ ಪಿ ತುಕಡಿಗಳು, ಐದು ಸಿಆರ್ ಪಿಎಫ್ ತುಕಡಿಗಳು ಸೇರಿದಂತೆ 450 ಪೊಲೀಸ್ ಕಾನ್ಸ್ ಸ್ಟೆಬಲ್ ಹಾಗೂ 40 ಮಂದಿ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.

ಟೋಲ್ ಕಾಂಪ್ಲೆಕ್ಸ್ ಕೇಂದ್ರಕ್ಕೆ ನುಗ್ಗಲು ಯತ್ನಿಸಿದ ಸುಮಾರು 130 ಪ್ರತಿಭಟನಾ ಕಾರರು ಸೇರಿದಂತೆ ನೂರಾರು ಜನರನ್ನು ಪೊಲೀಸರು ಬಂಧಿಸಿ ಹತ್ತಿರದ ಪೊಲೀಸ್ ಕ್ಯಾಂಪ್ ಶಿಬಿರಗಳಲ್ಲಿ ಕೂಡಿ ಹಾಕಲಾಗಿದೆ.

ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ಎರಡೂ ಕಡೆಯ ವಾಹನ‌ ಸಂಚಾರಕ್ಕೆ ಪೊಲೀಸರು ತಡೆಯೊಡ್ಡಿದ್ದಾರೆ.

ದಸ್ತಗಿರಿ ಪ್ರಕ್ರಿಯೆ ಮುಂದುವರಿಯುತ್ತಿದ್ದು, ಪೊಲೀಸು ವಾಹನಗಳಲ್ಲಿ ಪ್ರತಿಭಟನಾ ಕಾರರನ್ನು ಬಂಧಿಸಿ ಸ್ಥಳೀಯ ಸ್ಟೇಶನ್ ಮತ್ತು ಬೈಕಂಪಾಡಿ, ಮಂಗಳೂರು ಕೇಂದ್ರಗಳಿಗೆ ರವಾನಿಸಲಾಗಿದೆ. ಬಂಧಿತ ಪ್ರತಿಭಟನಾ ಕಾರರು ಸರಕಾರದ ವಿರುದ್ಧ ಘೋಷಣೆ ಕೂಗುವ ದೃಶ್ಯ ಕಂಡುಬಂತು.

ಈ ಮಧ್ಯೆ ಪ್ರತಿಭಟನಾ ಸ್ಥಳದಲ್ಲಿ ಪೊಲೀಸ್ ನೇತ್ರತ್ವ ವಹಿಸಿದ್ದ ಪೊಲೀಸ್ ಆಯುಕ್ತರನ್ನು ಉದ್ದೇಶಿಸಿ, ತಡರಾತ್ರಿ ನೊಟೀಸ್ ತೆಗೆದುಕೊಂಡು ಪೊಲೀಸರು ತನ್ನ ಮನೆಗೆ ಆಗಮಿಸಿದ್ದಕ್ಕೆ ಸುರತ್ಕಲ್ ಟೋಲ್ ಗೇಟ್ ಪ್ರತಿಭಟನಾ ಸ್ಥಳದಲ್ಲಿ ಸಾಮಾಜಿಕ ಹೋರಾಟಗಾರ್ತಿ‌ ಪ್ರತಿಭಾ ಕುಳಾಯಿ ಕಮಿಷನರ್ ಶಶಿಕುಮಾರ್ ಗೆ‌ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಸುರತ್ಕಲ್ ಟೋಲ್ ಗೇಟ್ ಮುತ್ತಿಗೆಗೆ ಯತ್ನಿಸಿ ಬಂಧನಕ್ಕೊಳಗಾಗಿ ಪೊಲೀಸ್ ವಶದಲ್ಲಿದ್ದ ಮಹಿಳಾ ಪ್ರತಿಭಟನಾಕಾರರನ್ನು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದರು.

ಬಂಧನಕ್ಕೆ ಒಳಗಾದ ಟೋಲ್ ಮುಂಚೋಣಿ ನಾಯಕರಾದ ಹೋರಾಟ ಸಮಿತಿಯ ಸಂಚಾಲಕರಾದ ಮುನೀರ್ ಕಾಟಿಪಳ್ಳ ಮತ್ತು ಇತರರು.