May 8, 2026

Vokkuta News

kannada news portal

ಬೆಂಗಳೂರು, ಮೇ 16. ರಾಜ್ಯ ಮುಸ್ಲಿಮ್ ಸಮ್ಮೇಳನ, ಸರಕಾರದ ಭರವಸೆ, ಈಡೇರಿಕೆ, ನಿರ್ಲಕ್ಷ್ಯಗಳ ವರದಿ ಬಿಡುಗಡೆ.

ಮೇ 6, 2026 ಬುಧವಾರ ಬೆಂಗಳೂರಿನ ಶಿವಾಜಿನಗರದಲ್ಲಿರುವ ಎ ಜೆ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ರಾಜ್ಯದ ಪ್ರಮುಖ ಮುಸ್ಲಿಂ ಸಂಘಟನೆಗಳು, ಸಂಘ ಸಂಸ್ಥೆಗಳು, ಉಲೇಮಾ ಸಂಘಟನೆಗಳು, ಒಕ್ಕೂಟಗಳ ಪ್ರತಿನಿಧಿಗಳು ಹಾಗೂ ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ (ಕೆ.ಆರ್. ಎಮ್ ಒ) ಅಡ್ ಹಾಕ್ ಸಮಿತಿಯ ಸದಸ್ಯರ ಸಭೆ ಯಶಸ್ವಿಯಾಗಿ ನಡೆಯಿತು.

ಈ ಸಭೆಯಲ್ಲಿ ರಾಜ್ಯದ ವಿವಿಧೆಡೆಗಳ ಸಾಮುದಾಯಿಕ ಸಂಘಟನೆಗಳ ನಾಯಕರು, ಹಿರಿಯ ಉಲೇಮಾಗಳು, ಜಮಾಅತ್ ಗಳ ಮುಖಂಡರು, ವಕೀಲರು, ನಿವೃತ್ತ ಅಧಿಕಾರಿಗಳು, ಪತ್ರಕರ್ತರು, ಆಕ್ಟಿವಿಸ್ಟ್ ಗಳು, ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ (ಕೆ.ಆರ್. ಎಮ್ ಒ) ಅಡ್ ಹಾಕ್ ಸಮಿತಿಯ ಸದಸ್ಯರು ಸೇರಿ 75ಕ್ಕೂ ಹೆಚ್ಚು ಪ್ರತಿನಿಧಿಗಳು ಸೇರಿದ್ದರು. ಪೂರ್ವಾಹ್ನ 11 ಗಂಟೆಯಿದ ಅಪರಾಹ್ನ 2.30 ರವರೆಗೆ ಸಭೆ ನಡೆಯಿತು.

ಕೆ . ಆರ್.ಎಮ್.ಒ ಅಡ್ ಹಾಕ್ ಸಮಿತಿಯ ವರದಿ ತಯಾರಿ ತಂಡದ ಸದಸ್ಯರು ಹಾಗು ವಿವಿಧ ಕ್ಷೇತ್ರಗಳ ಪರಿಣತರು ತಯಾರಿಸಿದ ಕಾಂಗ್ರೆಸ್ ಸರಕಾರದ ಮೂರು ವರ್ಷಗಳ ಕಾರ್ಯವೈಖರಿ ಹಾಗು ಅತ್ಯಂತ ಪ್ರಮುಖ ಹತ್ತು ವಿಷಯಗಳಲ್ಲಿ ಕಾಂಗ್ರೆಸ್ ಮುಸ್ಲಿಮರಿಗೆ ನೀಡಿದ್ದ ಭರವಸೆಗಳು, ಅದರಲ್ಲಿ ಈಡೇರಿದ್ದೆಷ್ಟು, ಈಡೇರದೇ ಇರುವ ಭರವಸೆಗಳು ಎಷ್ಟು, ಕಾಂಗ್ರೆಸ್ ಸರಕಾರದಲ್ಲಿ ಪ್ರಾತಿನಿಧ್ಯದ ವಿಷಯದಲ್ಲಿ ಮುಸ್ಲಿಮರು ಎದುರಿಸಿದ ತಾರತಮ್ಯ ಹಾಗು ಈಗ ಸರಕಾರಕ್ಕೆ ನಮ್ಮ ಬೇಡಿಕೆಗಳ ಕುರಿತ ಸಂಪೂರ್ಣ ವರದಿಯನ್ನು ಬುಧವಾರದ ಸಭೆಯಲ್ಲಿ ಮಂಡಿಸಲಾಯಿತು. ವರದಿಯಲ್ಲಿರುವ ಹಿಜಾಬ್ ನಿರ್ಬಂಧ, ಮೀಸಲಾತಿ ರದ್ದತಿ, ದ್ವೇಷ ಭಾಷಣ – ದ್ವೇಷ ಅಪರಾಧ, ಬಜೆಟ್ ಹಂಚಿಕೆ, ರಾಜಕೀಯ ಪ್ರಾತಿನಿಧ್ಯ, ವಕ್ಫ್ ವಿಷಯ, ಗೋ ಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿರ್ಬಂಧ ಕಾಯ್ದೆ, ವಿದ್ಯಾರ್ಥಿ ವೇತನ – ಶಿಕ್ಷಣ ಕ್ಷೇತ್ರದ ಅನುದಾನ ಸಹಿತ ವಿವಿಧ ವಿಷಯಗಳ ಬಗ್ಗೆ ಎಲ್ಲರಿಂದಲೂ ಸಲಹೆ, ಸೂಚನೆಗಳು ಬಂದವು. ಅವುಗಳನ್ನು ವಿವರವಾಗಿ ಚರ್ಚಿಸಿ ವರದಿಯಲ್ಲಿ ಮಾಡಬೇಕಾದ ತಿದ್ದುಪಡಿಗಳನ್ನು ಸ್ವೀಕರಿಸಲಾಯಿತು.

ಸಭೆಯಲ್ಲಿ ಕಾಂಗ್ರೆಸ್ ಸರಕಾರ ರಾಜ್ಯದ ಮುಸ್ಲಿಮರನ್ನು ನಡೆಸಿಕೊಂಡಿರುವ ರೀತಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಯಿತು. ಸರಕಾರ ಹಾಗು ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯವನ್ನು ಹೀಗೆ ನಡೆಸಿಕೊಳ್ಳುವುದನ್ನು ಮುಂದುವರೆಸಿದರೆ ಸಮುದಾಯ ತನ್ನ ಆಯ್ಕೆಗಳನ್ನು ಮುಕ್ತವಾಗಿಡಬೇಕು ಎಂಬ ಅಭಿಪ್ರಾಯ ಎಲ್ಲರಿಂದಲೂ ವ್ಯಕ್ತವಾಯಿತು.

ಬಳಿಕ ಮೇ 16, 2026 ರಂದು ಶನಿವಾರ ಬೆಂಗಳೂರಿನ ಟೌನ್ ಹಾಲ್ ನಲ್ಲಿ ಈ ವರದಿಯನ್ನು ರಾಜ್ಯದ ಮುಸ್ಲಿಂ ಸಂಘಟನೆಗಳು, ಜಮಾಅತ್ ಗಳು, ಸಂಘ ಸಂಸ್ಥೆಗಳು ಹಾಗೂ ಒಕ್ಕೂಟಗಳ ವತಿಯಿಂದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಬಿಡುಗಡೆ ಮಾಡುವುದು ಎಂದು ನಿರ್ಧಾರ ತೆಗೆದುಕೊಳ್ಳಲಾಯಿತು. ಆ ಸಮಾವೇಶದ ಹೆಸರು ‘ಕರ್ನಾಟಕ ಮುಸ್ಲಿಂ ಸಮಾವೇಶ – ಕಾಂಗ್ರೆಸ್ ಸರಕಾರ ಹೇಳಿದ್ದೇನು ? ಮಾಡಿದ್ದೇನು ? ಮುಂದೇನು ? ವರದಿ ಬಿಡುಗಡೆ ‘ ಎಂದಾಗಿರುತ್ತದೆ.

ಆದಷ್ಟು ಹೆಚ್ಚು ಸಂಖ್ಯೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಜನರು ಬಂದು ಸೇರಿ ‘ಕರ್ನಾಟಕ ಮುಸ್ಲಿಂ ಸಮಾವೇಶ’ದಲ್ಲಿ ಈ ವರದಿಯನ್ನು ಬಿಡುಗಡೆ ಮಾಡಿ ಸರಕಾರಕ್ಕೆ ಹಾಗು ಕಾಂಗ್ರೆಸ್ ಪಕ್ಷಕ್ಕೆ ಬಲವಾದ ಸಂದೇಶ ರವಾನಿಸಬೇಕು ಎಂದು ಎಲ್ಲರೂ ಸರ್ವಾನುಮತದಿಂದ ಸೂಚಿಸಿದರು. ಮೇ 16ರ ಕರ್ನಾಟಕ ಮುಸ್ಲಿಂ ಸಮಾವೇಶಕ್ಕೆ ಪ್ರತಿಯೊಂದು ಜಿಲ್ಲೆಯಿಂದಲೂ ಜನರು ಬರುವ ಹಾಗೆ ಎಲ್ಲ ಸಂಘಟನೆಗಳು, ಸಂಘ ಸಂಸ್ಥೆಗಳು, ಜಮಾಅತ್ ಗಳು ಶ್ರಮಿಸಬೇಕು ಎಂದು ನಿರ್ಧರಿಸಲಾಯಿತು.

ಮೇ 16 ರಂದು ‘ಕರ್ನಾಟಕ ಮುಸ್ಲಿಂ ಸಮಾವೇಶಕ್ಕೆ’ ಯಾವುದೇ ರಾಜಕಾರಣಿಗಳಿಗೆ ಆಹ್ವಾನ ಇರುವುದಿಲ್ಲ. ಬಿಡುಗಡೆಯಾದ ಕಾಂಗ್ರೆಸ್ ಸರಕಾರದ ಮೂರು ವರ್ಷದ ಕಾರ್ಯವೈಖರಿ ಕುರಿತ ವರದಿಯನ್ನು ಸಭೆಯ ಬಳಿಕ ಮುಖ್ಯಮಂತ್ರಿ , ಉಪಮುಖ್ಯಮಂತ್ರಿ, ಸಚಿವರು ಹಾಗು ಶಾಸಕರುಗಳಿಗೆ ತಲುಪಿಸಬೇಕು ಎಂದು ನಿರ್ಧರಿಸಲಾಯಿತು ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

1.ಸುಹೇಲ್ ಅಹ್ಮದ್ ಮರೂರ್
(80504 75788), 2.ತನ್ವಿರ್ ಅಹ್ಮದ್ ಖಾನ್
(98861 94492)  3.ಯಹ್ಯಾ ದಾಮೂದಿ
(97398 66895)