July 27, 2024

Vokkuta News

kannada news portal

ಫಾಝಿಲ್,ಮಸೂದ್: ಸರಕಾರದ ತಾರತಮ್ಯ ವಿರೋಧಿಸಿ ಸಂಘಟನೆಗಳ ಬೃಹತ್ ಪ್ರತಿಭಟನೆ.

ಮಂಗಳೂರು: ಸುರತ್ಕಲ್ ಫಾಝಿಲ್ ಮತ್ತು ಸುಳ್ಯದ ಮಸೂದ್ ಹತ್ಯೆಯನ್ನು ಖಂಡಿಸಿ ಹಾಗೂ ಸರ್ಕಾರ, ಕೃತ್ಯದ ನಂತರ ನಡೆದುಕೊಂಡ ತಾರತಮ್ಯ ನೀತಿಯನ್ನು ಖಂಡಿಸಿ ಸುರತ್ಕಲ್ ನ ಮುಸ್ಲಿಂ ಐಕ್ಯತಾ ವೇದಿಕೆ ವತಿಯಿಂದ ಇಂದು ಮಂಗಳೂರಿನ,ನಗರದ ಮಿನಿ ವಿಧಾನ ಸೌಧ ಎದುರಿಗೆ ಬೃಹತ್ ಪ್ರತಿಭಟನೆ ಆಯೋಜಿಸಲಾಗಿತ್ತು.

ಪ್ರತಿಭಟನೆಯಲ್ಲಿ ವಿವಿಧ ಸಂಘ ಸಂಸ್ಥೆ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಸುರತ್ಕಲ್ ವಲಯ ಮುಸ್ಲಿಮ್ ಐಕ್ಯತಾ ವೇದಿಕೆಯ ಅಧ್ಯಕ್ಷರಾದ ಅಶ್ರಫ್ ಬದ್ರಿಯಾ, ಮಂಗಳೂರು ಶಾಂತಿ ಪ್ರಕಾಶನ ಮುಖ್ಯಸ್ಥರು ಜಮಾತ್ ಇಸ್ಲಾಮಿ ಹಿಂದ್ ನ ಮೊಹಮ್ಮದ್ ಕುಂಞ,ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ ಎ. ಕೆ.ಅಶ್ರಫ್,ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ದ ಅಧ್ಯಕ್ಷರಾದ ಕೆ.ಅಶ್ರಫ್, ಚೊಕ್ಕ ಬೆಟ್ಟು ತನ್ನೀರು ಭವೀ ಮೋಹಿಯಿದ್ದೀನ್ ಜುಮ್ಮಾ ಮಸೀದಿ ಖತೀಬ್ ಆದ ಎಸ್. ಬಿ. ದಾರಿಮಿ,ಎಸ್.ಎಸ್. ಎಫ್ ರಾಜ್ಯ ಪದಾಧಿಕಾರಿ ಯಾಕೂಬ್ ಸಹದಿ ಮುಂತಾದವರು ಭಾಗವಹಿಸಿ, ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಎಸ್.ಎಸ್. ಎಫ್ ರಾಜ್ಯ ಮುಖಂಡರಾದ ಯಾಕೂಬ್ ಸಹದಿಯವರು ಮಾತನಾಡಿ, ಎರಡು ಸಂಘಟನೆಗಳ ನಡುವೆ ನಡೆದ ಘರ್ಷಣೆ ಬಗ್ಗೆ ಮಂಗಳೂರಿನಲ್ಲಿ ಮುಖ್ಯಮಂತ್ರಿಯ ಬಳಿ ಪತ್ರಕರ್ತರು ಕೇಳಿದಾಗ ಕ್ರಿಯೆಗೆ ಪ್ರತಿಕ್ರಿಯೆ ಸಹಜ ಎಂದು ಹೇಳಿದ್ದೇ ಜಿಲ್ಲೆಯಲ್ಲಿ ಕೋಮುಗಲಭೆಗೆ ಕಾರಣ ಎಂದರು

ಬೊಮ್ಮಾಯಿ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ಗಲಭೆಗೆ ಕಿಡಿ ಹಚ್ಚಿದ್ದು ಅದು ಇಂದು ಕೊಲೆಗಳ ಮೂಲಕ ಉರಿಯುತ್ತಿದೆ ಎಂದು ಅವರು ಹೇಳಿದರು.

ಈ ಮೂರೂ ಕೊಲೆಯ ತನಿಖೆ, ಪರಿಹಾರ ನೀಡುವಿಕೆಯಲ್ಲಿ ಸರಕಾರ ಏಕೆ ತಾರತಮ್ಯ ಮಾಡುತ್ತಿದೆ. ಕೊಲೆಯಾದ ಒಂದು ಕುಟುಂಬಕ್ಕೆ ಲಕ್ಷಾಂತರ ರೂ. ಪರಿಹಾರ ನೀಡಿದ್ದು, ಉಳಿದ ಎರಡು ಕುಟುಂಬವನ್ನು ಯಾಕೆ ನಿರ್ಲಕ್ಷಿಸಲಾಗಿದೆ ಎಂದು ಪ್ರಶ್ನಿಸಿದ ಅವರು, ಅವರೇನು ಮುಸ್ಲಿಮರು ಇಲ್ಲಿ ಪುಕ್ಸಟ್ಟೆ ಬದುಕುತ್ತಿದ್ದಾರಾ? ಅವರೂ ತೆರಿಗೆ ಕಟ್ಟಿಯೇ ಬದುಕುತ್ತಿರುವುದು ಎಂದು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಚೊಕ್ಕ ಬೆಟ್ಟು ತಣ್ಣೀರು ಬಾವಿ ಮೋಹಿಯುದ್ದೀನ್ ಜುಮ್ಮಾ ಮಸೀದಿ ಖತೀಬ್, ಎಸ್.ಬಿ.ದಾರಿಮಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಅನ್ಯಾಯದ ವಿರುದ್ಧ ಮಾತನಾಡಬೇಕು ಎಂಬ ಉದ್ದೇಶದಿಂದ ಇಂದು 26 ಜಮಾಅತ್ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ಬೀದಿಗಿಳಿದಿದ್ದೇವೆ. ಸರಕಾರ ಎಲ್ಲರ ತೆರಿಗೆಯಿಂದ ನಡೆಯುತ್ತಿದೆ. ಇಂತಹ ಸರಕಾರ, ಪರಿಹಾರ ನೀಡುವಲ್ಲಿ ತಾರತಮ್ಯವೆಸಗಿದೆ . ಮನಸ್ಸಾಕ್ಷಿ ಇದ್ದರೆ ಸರ್ಕಾರದಲ್ಲಿರುವವರು ತಾವು ಮಾಡಿದ್ದು ಸರಿಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸರಕಾರಕ್ಕೆ ಕರೆ ನೀಡಿದರು.

ಅಧಿಕಾರ ನಡೆಸುವವರು ರಾಜಧರ್ಮ ಪಾಲಿಸಬೇಕು. ಅಧಿಕಾರ ಸ್ವೀಕರಿಸುವಾಗ ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡುವುದಾಗಿ ಪ್ರತಿಜ್ಞೆ ಕೈಗೊಂಡವರು ತಮ್ಮ ಪ್ರತಿಜ್ಞೆಗೆ ಬದ್ಧರಾಗಿರಬೇಕು, ಹಿಂದೂ ಧರ್ಮವನ್ನು ಉದ್ಧಾರ ಮಾಡುತ್ತೇವೆ ಎಂದು ಹೇಳುವ ಇವರು, ಹಿಂದೂ ಧರ್ಮವನ್ನು ನಾಶಪಡಿಸುತ್ತಿದ್ದಾರೆ. ಹಿಂದೂ ಧರ್ಮದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡು ತಾವು ನಕಲಿ ಹಿಂದೂಗಳು ಎಂಬುದನ್ನು ಸಾಬೀತುಪಡಿಸಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.

ಜಮಾಹತೆ ಇಸ್ಲಾಮಿ ಹಿಂದ್ ಮುಖ್ಯಸ್ಥರಾದ ಮುಹಮ್ಮದ್ ಕುಂಞಿ ಮಾತನಾಡಿ, ಅನ್ಯಾಯವನ್ನು ಪ್ರಶ್ನಿಸಬೇಕು ಎಂಬ ಆತ್ಮವಿಶ್ವಾಸದಿಂದ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮನುಷ್ಯತ್ವ, ಮಾನವೀಯತೆ, ಧರ್ಮ ನಿಷ್ಠೆ ಇದ್ದ ಯಾರೇ ಆದರೂ ಕೊಲೆಗಳು ನಡೆದಾಗ ದುಃಖಿಗಳಾಗುತ್ತಾರೆ . ಪ್ರತಿಯೊಂದು ಕೊಲೆ ಕೂಡ ಇಂತಹವರಲ್ಲಿ ಆಘಾತವನ್ನು ಉಂಟು ಮಾಡುತ್ತದೆ. ಚುನಾವಣೆ ಹತ್ತಿರ ಬರುವಾಗ ಇಂತಹ ಕೊಲೆಗಳು ಸಂಭವಿಸುತ್ತಿವೆ ಎಂಬುದನ್ನು ಜಾಗೃತ ಜನತೆ ಅರ್ಥ ಮಾಡಿಕೊಳ್ಳಬೇಕು.ಆಡಳಿತಗಾರರು ಎಂಬ ಹೊಣೆಗಾರಿಕೆಯಿಂದ ಕೆಳಗೆ ಇಳಿದು ದಲ್ಲಾಳಿಗಳಾಗಿ ಬದಲಾದಾಗ ಖಂಡಿತವಾಗಿಯೂ ಸಮಾಜದಲ್ಲಿ ಇಂತಹ ಸಾವುಗಳು ಸಂಭವಿಸುತ್ತವೆ. ಆಡಳಿತದಲ್ಲಿರುವವರು ಸಮಾಜಕ್ಕೆ ಒಳಿತು ಮಾಡದಿದ್ದರೂ ಪರವಾಗಿಲ್ಲ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ, ಮತ ಧ್ರುವೀಕರಣಗೊಳಿಸುವ ಪ್ರವೃತ್ತಿಯನ್ನು ಕೈಬಿಡಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಹುದ್ದೆಗೆ ಗೌರವ, ಪಾವಿತ್ರ್ಯದೆ ಇದೆ. ಅದನ್ನು ಹಾಳು ಮಾಡುವ ಕೆಲಸವನ್ನು ಮಾಡಬೇಡಿ ಎಂದು ಮುಹಮ್ಮದ್ ಕುಂಞಿ ಹೇಳಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮುಖ್ಯಸ್ಥರಾದ ಅಶ್ರಫ್ ಎ.ಕೆ. ಜೋಕಟ್ಟೆ ಮಾತನಾಡಿ, ನ್ಯಾಯ ದೇಶದಲ್ಲಿ ಮರೀಚಿಕೆಯಾಗುತ್ತಿದೆ . ಕೊಲೆಗಳ ಮೂಲಕ ಬೆದರಿಸುವ ಪ್ರಯತ್ನ ನಡೆಯುತ್ತಿದೆ. ತಾರತಮ್ಯವೆಸಗುವ ಮೂಲಕ ಒಂದು ಸಮುದಾಯವನ್ನು ದಮನಿಸುವ ಪ್ರಯತ್ನ ನಡೆಸಲಾಗುತ್ತಿದೆ. ಕಠಿಣ ಕಾನೂನಿನ ಮೂಲಕ ಹೆದರಿಸಿ ಮಂಡಿಯೂರಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಇದರಿಂದ ಮುಸ್ಲಿಮರನ್ನು ದಮನಿಸಲು ಸಾಧ್ಯವಿಲ್ಲ ಎಂದರು.

ರೈತರು ತಮ್ಮ ಹಕ್ಕುಗಳಿಗಾಗಿ ವರ್ಷಗಟ್ಟಲೆ ಬೀದಿಯಲ್ಲಿ ನಿಲ್ಲಬೇಕಾಯಿತು. ಎನ್. ಆರ್ .ಸಿ ಸಂದರ್ಭದಲ್ಲಿ ದೇಶಾದ್ಯಂತ ಮುಸ್ಲಿಮರು ಬೀದಿಗಳಿದn ಪರಿಣಾಮ ಕಾನೂನು ಜಾರಿಯಾಗದಂತೆ ತಡೆಯಲು ಸಾಧ್ಯವಾಯಿತು. ಆದ್ದರಿಂದ ಹೋರಾಟ ನಿರಂತರವಾಗಿ ನಡೆದಾಗ ಮಾತ್ರ ಯಶಸ್ಸು ಸಾಧ್ಯ. ಆದ್ದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯ ಮೂಲೆ ಮೂಲೆಗಳಲ್ಲೂ ಹೋರಾಟದ ಕಿಚ್ಚು ಆರಂಭಗೊಳ್ಳಬೇಕು ಎಂದು ಹೇಳಿದರು.

ಬೊಮ್ಮಾಯಿಯವರ ಪಿತ್ರಾರ್ಜಿತ ಸ್ವತ್ತನ್ನು ನಾವು ಕೇಳುತ್ತಿಲ್ಲ. ಬಸವರಾಜ ಬೊಮ್ಮಾಯಿಯಾಗಿ ಅವರು ಒಂದು ಮನೆಗೆ ಹೋಗಿದ್ದರೆ ನಾವು ಅದನ್ನು ಪ್ರಶ್ನಿಸುತ್ತಿರಲಿಲ್ಲ . ಆದರೆ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿ ಸಂತ್ರಸ್ತ ಕುಟುಂಬವನ್ನು ಸಮಾನ ರೀತಿಯಲ್ಲಿ ಕಾಣಬೇಕಾಗಿತ್ತು . ಆದರೆ ಅವರು ಸಾಂತ್ವನ ಹೇಳುವುದರಲ್ಲೂ , ಪರಿಹಾರ ನೀಡುವುದರಲ್ಲೂ ತಾರತಮ್ಯವೆಸಗಿ ಮುಖ್ಯಮಂತ್ರಿ ಹುದ್ದೆಗೆ ದ್ರೋಹ ಬಗೆದರು ಎಂದು ಅಶ್ರಫ್ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಭುತ್ವದಿಂದ ಯುಎಪಿಎ ಕಾನೂನು ನಿರಂತರವಾಗಿ ದುರ್ಬಳಕೆಯಾಗುತ್ತಿದೆ . ಸ್ಥಳೀಯವಾಗಿ ನಡೆಯುವ ಹಲ್ಲೆ, ಕೊಲೆ, ಚೂರಿ ಇರಿತ ಪ್ರಕರಣಗಳಿಗೂ ಯುಎಪಿಎ ಕೇಸು ಹಾಕುವ ಮೂಲಕ ದಮನಿಸುವ ಪ್ರಯತ್ನ ನಡೆಸಲಾಗುತ್ತಿದೆ. ಸರ್ಕಾರವೇ ‘ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ’ ನೀತಿಯನ್ನು ಅನುಸರಿಸುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

2016- 2020ರವರೆಗಿನ ನಾಲ್ಕು ವರ್ಷಗಳಲ್ಲಿ 5027 ಯುಎಪಿಎ ಪ್ರಕರಣ ದಾಖಲಿಸಲಾಗಿದ್ದು, 24,000 ಜನರನ್ನು ಜೈಲಿಗೆ ತಳ್ಳಲಾಗಿದೆ. ಇದುವರೆಗೆ ಕೇವಲ 386 ಜನರನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು , 212 ಮಂದಿಗೆ ಶಿಕ್ಷೆಯಾಗಿದೆ. ಆದರೆ 23,500ಕ್ಕೂ ಹೆಚ್ಚು ಜನರು ಈಗಲೂ ಜೈಲಿನಲ್ಲಿ ಕೊಳೆಯುವಂತೆ ಮಾಡಲಾಗಿದೆ ಎಂದು ಅಶ್ರಫ್ ಅಂಕಿ ಅಂಶ ಸಹಿತ ವಿವರಿಸಿದರು.

ದೇಶದ ಸಂವಿಧಾನ ನಾಶಪಡಿಸುವ ಫ್ಯಾಶಿಸ್ಟ ರ ಕನಸು ಯಾವುದೇ ಕಾರಣಕ್ಕೂ ನನಸಾಗದು . ಅದಕ್ಕೆ ಈ ದೇಶದ ಸಂವಿಧಾನಪ್ರಿಯರು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸಂಘಪರಿವಾರದಿಂದ ಹತ್ಯೆಗೀಡಾದ ಫಾಝಿಲ್ ಅವರ ತಂದೆ ಉಮ್ಮರ್ ಫಾರೂಕ್ ಮಾತನಾಡಿ, ಯಾರ ಮಕ್ಕಳು ಕೂಡ ಸಾಯಬಾರದು. ಸರ್ಕಾರದಿಂದಲೇ ತಾರತಮ್ಯ ಉಂಟಾಗಿರುವುದು ಬೇಸರ ತಂದಿದೆ ಎಂದು ಹೇಳಿದರು..

ಸರಕಾರವು ಮಸೂದ್ ಮತ್ತು ಫಾಝಿಲ್ ಹತ್ಯಾ ನಂತರ ತಳೆದ ನಿಲುವುಗಳನ್ನು ವಿರೋಧಿಸಿ ಸಂಘಟನೆಗಳ ಸದಸ್ಯರು ಮತ್ತು ಸಾರ್ವಜನಿಕರು ಘೋಷಣೆ ಕೂಗಿದರು.

ಮಾಜಿ ಮೇಯರ್ ಕೆ.ಅಶ್ರಫ್ ಮಾತನಾಡಿ, ಫಾಝಿಲ್, ಮಸೂದ್ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡದಿದ್ದರೆ ಮುಂದಿನ ದಿನಗಳಲ್ಲಿ ಮುಸ್ಲಿಮ್ ಒಕ್ಕೂಟದಿಂದ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕಳೆದ ಕೆಲವು ತಿಂಗಳ ಹಿಂದೆ ಜಿಲ್ಲೆಯಲ್ಲಿ ಸರಣಿ ಹತ್ಯೆಗಳು ನಡೆದು ಜಿಲ್ಲೆಯ ಶಾಂತಿ ಸುವ್ಯವಸ್ತೆ ವ್ಯತ್ಯಯವಾಗಿತ್ತು. ಮತ್ತು ನಂತರದ ಬೆಳವಣಿಗೆಗಳಲ್ಲಿ ಪರಿಸ್ಥಿತಿ ಮತೀಯ ಉದ್ವಿಗ್ನತೆ ಪಡೆದು ಸರಕಾರ ಪರಿಸ್ಥಿತಿಯನ್ನು ವಿವಿಧ ಪ್ರಯತ್ನಗಳಿಂದ ತಹಬದಿಗೆ ತಂದಿತ್ತು.

ಸುಳ್ಯ ಮಸೂದ್ ಎಂಬ ಯುವಕನ ಹತ್ಯಾ ನಂತರದ ಬೆಳವಣಿಗೆಯಲ್ಲಿ ಪ್ರವೀಣ್ ನೆಟ್ಟಾರು ಎಂಬ ಯುವ ಬಿ. ಜೇ. ಪಿ ಮುಖಂಡನನ್ನು ದುಷ್ಕರ್ಮಿಗಳು ಹತ್ಯೆ ನಡೆಸಿದ ಕಾರಣದಿಂದ ಸ್ಥಳೀಯವಾಗಿ ಘಟನೆ ಘಂಭೀರತೆ ಪಡೆದಿತ್ತು. ಸ್ಥಳೀಯವಾಗಿ ಪ್ರವೀಣ್ ನೆಟ್ಟಾರೂ ಹತ್ಯಾ ನಂತರ ನಿರ್ಧಿಷ್ಟ ಪಕ್ಷದ ಮತ್ತು ಧರ್ಮದ ಕಾರ್ಯಕರ್ತರು ಸ್ಥಳೀಯವಾಗಿ ಪ್ರತಿಭಟನೆ,ರಸ್ತೆ ತಡೆ ನಿರ್ಮಿಸಿದ ಕಾರಣದಿಂದ ಕಾನೂನು ಸುವ್ಯವಸ್ತೆ ಹದೆಗೆಟ್ಟು,ರಾಜ್ಯದ ಮುಖ್ಯ ಮಂತ್ರಿ ಮೃತ ಪ್ರವೀಣ್ ಮನೆಗೆ ಭೇಟಿ ನೀಡಿ ಮೃತನ ಕುಟುಂಬಕ್ಕೆ ₹25 ಸಾವಿರ ಪರಿಹಾರ ಮೊತ್ತ ಘೋಷಿಸಿ,ಪರಿಹಾರ ಕೂಡ ನೀಡಿದ್ದರು.

ಆದರೆ,ಕೆಲವೇ ದಿನಗಳ ಹಿಂದೆ ಹತ್ಯೆಯಾದ ಮಸೂದ್ ಮನೆಗೆ ಭೇಟಿ ನೀಡಿರಲಿಲ್ಲ. ಪ್ರವೀಣ್ ಹತ್ಯೆಯ ರೂವಾರಿಗಳ ಗುರುತಿಸುವಿಕೆ ಮತ್ತು ಪತ್ತೆ ಹಚ್ಚುವ ಮುನ್ನವೇ,ಮರುದಿನ ಸುರತ್ಕಲ್ ನ ಮಂಗಳ ಪೇಟೆಯ ಫಾಝಿಲ್ ಎಂಬ ಯುವಕನ ಹತ್ಯೆಯನ್ನು ಪ್ರತೀಕಾರದ ಹತ್ಯೆಯಾಗಿ ಬಿಂಬಿಸುವಂತೆ ಘೂ ಡಾ ಲೋಚನೆ ಯಿಂದ ನಡೆಸಲಾಗಿತ್ತು.

ಆದರೆ,ನಂತರದ ಬೆಳವಣಿಗೆಯಲ್ಲಿ ಈ ಘಟನೆಗಳನ್ನು ಮತೀಯ ದೃಷ್ಟಿಯಿಂದ ಬಿಂಬಿಸುವಂತೆ ಪೂರಕವಾಗುವ ಹಲವು ಪ್ರಯತ್ನಗಳನ್ನು ಹಾಲಿ ಅಧಿಕಾರದಲ್ಲಿರುವ ಸರಕಾರ ನಡೆಸಿದೆ ಎಂದು ವ್ಯಾಪಕತೆ ಪಡೆದಿತ್ತು. ಮಸೂದ್ ಮತ್ತು ಫಾಝಿಲ್ ನ ಸಂತ್ರಸ್ತ ಕುಟುಂಬಕ್ಕೆ ಕೂಡಾ ಸರಕಾರ ಪರಿಹಾರ ಮೊತ್ತ ವಿತರಿಸಬೇಕು ಎಂಬ ಬೇಡಿಕೆ, ಮೂರು ಹತ್ಯೆಗಳ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ವಹಿಸಿ ಕೊಡಬೇಕೆಂದು ಆಗ್ರಹಿಸಲಾಗಿತ್ತು.

ಇತ್ತೀಚೆಗೆ ಮಂಗಳೂರಿನ ಮುಸ್ಲಿಮ್ ಪ್ರಮುಖ ಮುಖಂಡರ ನಿಯೋಗವು ಬೆಂಗಳೂರಿಗೆ ತೆರಳಿ ವಿರೋಧ ಪಕ್ಷ ನಾಯಕರಾದ ಸಿದ್ದರಾಮಯ್ಯನವರನ್ನು, ಶಾಸಕ ಮತ್ತು ವಿರೋಧ ಪಕ್ಷ ಉಪ ನಾಯಕರಾದ ಶ್ರೀ ಯು.ಟಿ. ಖಾದರ್ ರವರ ನೇತೃತ್ವದಲ್ಲಿ ಭೇಟಿ ಮಾಡಿ ಮಸೂದ್ ಮತ್ತು ಫಾಝಿಲ್ ಹತ್ಯಾ ನಂತರದ ಸರಕಾರದ ತಾರತಮ್ಯ ಬೆಳವಣಿಗೆಯ ಬಗ್ಗೆ ದ್ವನಿ ಎತ್ತಲು ಮನವಿ ಮಾಡುವುದರೊಂದಿಗೆ ಇತರ ಪ್ರಮುಖ ನಾಯಕರಾದ ಬಿ.ಕೆ.ಹರಿಪ್ರಸಾದ್,ಕುಮಾರಸ್ವಾಮಿ,ಡಿ.ಕೆ.ಶಿವಕುಮಾರ್, ಬಿ.ಎಂ.ಫಾರೂಕ್,ರಮೇಶ್ ಕುಮಾರ್, ಬಿ.ಝಡ್.ಝಮೀರ್ ಅಹ್ಮದ್ ಖಾನ್,ಪ್ರಿಯಾಂಕ ಖರ್ಗೆ ಮುಂತಾದವರನ್ನು ಭೇಟಿ ಮಾಡಿ ಅವಹಾಲು ಸಲ್ಲಿಸಲಾಗಿತ್ತು.
ಮಸೂದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರವು ವಿಧಾನ ಮಂಡಲದ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡದೆ ತಾರತಮ್ಯ ಮುಂದುವರಿಸಿದೆ ಎಂದು ವಿಪಕ್ಷದ ಉಪನಾಯಕ ಯು.ಟಿ.ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದರು.