July 27, 2024

Vokkuta News

kannada news portal

ಜಲ ವಿವಾದ,ಸೆ.29 ಕನ್ನಡ ಸಂಘಟನೆಗಳಿಂದ ಕರ್ಣಾಟಕ ಬಂದ್ ಕರೆ:ವಿಪಕ್ಷ ಬೆಂಬಲ, ಪ್ರತಿಭಟನೆ ಮಾತ್ರ: ಸರಕಾರ.

ಬೆಂಗಳೂರು: ಕಾವೇರಿಗಾಗಿ ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಇಂದು ಮಧ್ಯರಾತ್ರಿಯಿಂದ ನಿಷೇಧಾಜ್ಞೆ ಜಾರಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ.

ಕಾವೇರಿಗಾಗಿ ನಾಳೆ ಕರ್ನಾಟಕ ಬಂದ್ ಕರೆಯಲ್ಲಿ ವಾಟಾಳ್ ನಾಗರಾಜ್ ಮಾತನಾಡಿ ‘ಮಾಧ್ಯಮದವರು ಬಂದಿರೋದೆ ಒಂದು ತಯಾರಿ ಎಂದು ಹೇಳಿದರು.ನಿಮ್ಮನೆಲ್ಲ ನೋಡಿದ್ರೆ ಬಂದ್ ಯಶಸ್ವಿ ಯಾಗುತ್ತೆ ಅನ್ನಿಸುತ್ತದೆ. ನಾಳೆ ನಡೆಯುವ ಬಂದ್ ಶಾಂತಿಯುತವಾಗಿದ್ದು, ಈ ಬಂದ್ ಗೆ ರಾಜ್ಯದ ಎಲ್ಲರಿಗೂ ಕೈ ಮುಗಿದು ಮನವಿ ಮಾಡ್ತೀವಿ. ‘ಇದು ಸ್ವಂತ ಬಂದ್ ಅಲ್ಲ, ಕಾವೇರಿಗಾಗಿ ನಡಿತಿರೋ ಬಂದ್. ಸಿದ್ದರಾಮಯ್ಯ ಅವರೇ ನೀವು ಬೆಂಬಲ ಕೊಡಬೇಕು ಎಂದು ಕರೆ ನೀಡಿದರು.

ಮಂಗಳೂರು.

ಕಾವೇರಿ ನದಿ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿಕರ್ನಾಟಕದ ಪಶ್ಚಿಮ ಕರಾವಳಿ ಭಾಗದಲ್ಲಿ ತೀವ್ರ ವಿರಳ ಪ್ರತಿಕ್ರಿಯೆ ಇರಲಿದೆ .ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳು ಅಧಿಕವಾಗಿ ಸೇವೆಯಲ್ಲಿದ್ದು ಬಸ್‌ ಮಾಲಕರ ಸಂಘ ಬಂದ್ ಕರೆಗೆ ಬೆಂಬಲ ನೀಡಿರುವುದಿಲ್ಲ. ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಈ ಬಂದ್ ಕರಾವಳಿಯಲ್ಲಿ ವಿರಳ ಸ್ಪಂದನ ಇರುವ ಕಾರಣ ನಾಳೆ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯಾಚರಿಸಲಿದೆ.ದಕ್ಷಿಣ ಕನ್ನಡ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ
ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯವು ಸೆಪ್ಟೆಂಬರ್ 29 ರಂದು ನಡೆಯಲಿರುವ ಕಾನೂನು ಪರೀಕ್ಷೆಯನ್ನು ಮುಂದೂಡಲು ನಿರ್ಧರಿಸಿದೆ. ಕಾವೇರಿ ನದಿ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಬಸವರಾಜ ಬೊಮ್ಮಾಯಿ.
ಶುಕ್ರವಾರದ ಬಂದ್‌ ಗೆ ಸಂಘಟನೆಗಳ ಜೊತೆಗೆ ವಿಪಕ್ಷದ ಬೆಂಬಲವೂ ಇದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗ 3,000 ಕ್ಯೂಸೆಕ್ಸ್ ನೀರು ಹಂಚಿಕೆ ಮಾಡಲು ಆದೇಶ ಬಂದಿದೆ. 10,000 ಕ್ಯೂಸೆಕ್ಸ್ ನೀರು ಬಿಡುಗಡೆಗೆ ಆದೇಶ ಬಂದಾಗ ಸುಪ್ರೀಂ ಕೋರ್ಟ್‌ ನಲ್ಲಿ ವಾದ ಮಂಡನೆ ಮಾಡಿದ್ದರೆ ಅಷ್ಟು ದೊಡ್ಡ ಪ್ರಮಾಣದ ನೀರು ಬಿಡುವ ಪ್ರಮೇಯ ಬರುತ್ತಿರಲಿಲ್ಲ. ತಡವಾಗಿಯಾದರೂ ಸರ್ಕಾರಕ್ಕೆ ಬುದ್ದಿ ಬಂದಿದೆ. ಜನ ಬೀದಿಗಿಳಿದು ಹೋರಾಟ ಮಾಡುವ ಸಂದರ್ಭ ಬಂದಿದೆ. ಸರ್ಕಾರ ಈಗ ಎಚ್ಚೆತ್ತುಕೊಂಡಿದೆ. ಈಗಾಗಲೇ ಸಾಕಷ್ಟು ನೀರು ಹರಿದು ಹೋಗಿದೆ. ತಮಿಳುನಾಡು ಟ್ರಿಬ್ಯುನಲ್ ಆದೇಶವನ್ನು ಉಲ್ಲಂಘನೆ ಮಾಡಿದೆ.

ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ.
ಪ್ರತಿಭಟನೆ ಮಾಡಲು ಯಾರಿಗೂ ನಾವು ಅಡ್ಡಿ ಮಾಡುವುದಿಲ್ಲ. ಆದರೆ ಬಂದ್ ಮಾಡಲು ಅವಕಾಶವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುರುವಾರ ಹೇಳಿದರು.ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದರ ವಿರುದ್ಧ ವಿವಿಧ ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ನಾಳೆ ಸಾವರ್ಜನಿಕರಿಗೆ ರಕ್ಷಣೆ ಕೊಟ್ಟೇ ಕೊಡುತ್ತೇವೆ. ಸುಪ್ರೀಂ ಕೋರ್ಟ್,‌ ಹೈಕೋರ್ಟ್ ಬಂದ್ ವಿಚಾರವಾಗಿ ಒಂದಷ್ಟು ಸೂಚನೆಗಳನ್ನು ನೀಡಿವೆ,‌ ಅವನ್ನು ಪಾಲಿಸಬೇಕಿದೆ ದಯವಿಟ್ಟು ಕಾನೂನು ಪಾಲಿಸಿ, ಬಂದ್ ಮಾಡದೆ ಪ್ರತಿಭಟನೆ ಮಾಡಿ ಎಂದು ಜನರಲ್ಲಿ ಮನವಿ ಮಾಡಿದರು.